ಹೀಗೇ ಎಲ್ಲೋ ಹೋಗುತ್ತಿರುವಾಗ ಅಚಾನಕ್ ಆಗಿ ಕಂಡ ಕೆಲವೊಂದು ದೃಶ್ಯಗಳು ಕ್ಷಣಮಾತ್ರ ಏನೋ ಭಾವನೆಗಳನ್ನು ಹುಟ್ಟಿಸಿ ಮರೆಯಾಗುತ್ತವೆ. ಸ್ನೇಹಿತರ ಕುಟುಂಬದೊಂದಿಗೆ ಕಾವೇರಿತಟದ ಗುರುಕುಲವೊಂದಕ್ಕೆ ಹೋದಾಗ ಕಂಡ ಈ ಸೈಕಲ್.
ಅಷ್ಟು ದೂರದ ದಾರಿ
ಬಿಟ್ಟೂ ಬಿಡದೇ ಕ್ರಮಿಸಿ
ಬಿಟ್ಟೂ ಬಿಡದೇ ಕ್ರಮಿಸಿ
ಇಲ್ಲಿಷ್ಟ ಬಂತೆಂದು
ನನ್ನಿಲ್ಲಿ ನಿಲ್ಲಿಸಿ
ಧಣಿಯು ಕೆಲಸಕೆ ಹೋಗಿಹನು
ಓ ! ನನಗೇನು ದಣಿವಿಲ್ಲ
ಹಚ್ಚ ಹಸಿರ ಮೆದು ಹಾಸಿನಲ್ಲಿ
ಬೆಚ್ಚನೇ ಎಳೆಬಿಸಿಲ ಕಾಯಿಸುತಿರುವೆ
ತೆಳು ತಂತಿಯ ಸಂಕೋಲೆ
ಬಿಗಿದು ಹೋಗಿಹನೆಂದು
ನೀವ್ ಮರುಗಬೇಡಿ
ತುಡುಗ ಕೊಂಡೊಯ್ಯಬಾರದೆಂಬ
ಕಡು ಮಮತೆ ಧಣಿಗೆ ನನ್ನೊಳು
ಅವನ್ಹೋದ ದಾರಿ ನಾ ನಿರುಕುತಿರುವೆ
ಇನ್ನೇನು ಬಂದುಬಿಡುವ
ನನ್ನನ್ನೆತ್ತಿ ನೇರಕ್ಕಿಟ್ಟು
ಬಂದ ಹಾದಿಯಲ್ಲಿ ನಡೆದುಬಿಡುವ
No comments:
Post a Comment